ಬಾಗಲಕೋಟೆ ಹೋಳಿ: ಹೀಗೆ ಸವಿ ಸವಿ ನೇನಪು…

 

ಇವತ್ತು ಹೋಳಿ ಹುಣ್ಣಿವೆ, ಊರಲ್ಲಿಲ್ಲ, ಹೋಳಿಗೆ ಮಾಡುವವರಿಲ್ಲ ಹೀಗಾಗಿ ಹೊಯ್ಯಕ್ಕೊಳ್ಳುದು ಇಲ್ಲ ಯಾಕಂದ್ರ ಹೋಯ್ಕೊಂಡ ಬಾಯಿಗೆ ಹೋಳಿಗೆ ತುಪ್ಪ ಬೇಕಲ್ಲ. ನನ್ನೂರು ಬಾಗಲಕೋಟೆ, ಹೋಳಿಯ ತನ್ನದೇ ಆದ ಇಶಿಷ್ಟ ಸಂಪ್ರದಾಯ, ಆಚರಣೆಗೆ ಪ್ರಸಿದ್ದ. ಬಾಗಲಕೋಟೆ ಹೋಳಿ ಹುಣ್ಣಿವೆ ಅಂದ್ರ ಅದರ ಖದರೇ ಬೇರೆ, ಹಲಗಿ ಮೇಳ, ತುರಾಯಿ ಹಲಗಿ, ನಿಶಾನಿ, ಸೋಗಿನ ಬಂಡಿ, ಬಣ್ಣದ ಗಾಡಿ ಮೇಲಾಗಿ ಮೂರು ದಿನಗಳ ಭರ್ಜರಿ ಬಣ್ಣ ಎರಚಾಟ. ಕೇಳಬ್ಯಾಡ್ರಿ ಆ ಹುರುಪು- ಹುಮ್ಮಸ್ಸು, ಅದರ ಗಮ್ಮತ್ತು.ಹುಣ್ಣಿವಿ ಇನ್ನೂ ಹದಿನೈದ ದಿನ ಐತಿ ಅಂದ್ರ ಸಾಕು, ಅಟ್ಟದ ಮ್ಯಾಲೆ ವರ್ಷಪೂರ್ತಿ ರೇಸ್ಟ ತೊಗೊಂಡ ಹಲಗಿ ಹೋರಗ ಬರ್ತಾವು, ಅದರ ನಾದ ಊರಿನ ಮೂಲೆ ಮೂಲೆಯಿಂದ ದ್ವನಿಸ್ತದ. ಪ್ರತಿ ರಾತ್ರಿ ಊರಿನ ನಾಲ್ಕೈದು ಜಾಗಾದಾಗ ಹಲಗಿ ಮ್ಯಾಳ ಎರ್ಪಡಿಸ್ತಾರ. ಹಲಗಿ ಮ್ಯಾಳ ಅಂದ್ರ ಹಲಗಿ ಮತ್ತ ಸನಾದಿ (ಶಹನಾಯಿ) ಜುಗಲಬಂದಿ. ಅದರ ಜೋತೆಗೆ ಕಣಿ, ಜುಮರಿ, ದಮ್ ಗಳ ಹಿಮ್ಮೇಳ ಇತ್ತಿಚಿಗೆ ಜಾಂಜ್, ಡ್ರಮ್ ಗಳು ಸಿಗ್ತಾವ.ಹಳೆಯ ಬಾಗಲಕೋಟೆ ನಗರದಲ್ಲಿ ೫ ಪ್ರಮುಖ ವಿಭಾಗಗಳು – ಕಿಲ್ಲಾ, ಜೈನಪೇಟ, ಹಳೆಪೇಟ, ಹೋಸಪೇಟ, ವೆಂಕಟಪೇಟ, ಪ್ರತಿ ದಿನ ಒಂದೊಂದು ಪೇಟೆಯ ಸೋಗು, ಬಣ್ಣದ ಗಾಡಿ (ಮೊದಲು ೫ ದಿನಗಳ ಬಣ್ಣ ಈಗ ಮೂರು ದಿನದದ್ದಾಗಿದೆ), ಪ್ರತಿ ಪೇಟೆಗೂ ಒಂದೊಂದು “ನಿಶಾನಿ” (ದ್ವಜ), ತುರಾಯಿ ಹಲಗಿ (ದೊಡ್ಡ ಹಲಗಿ ಅದಕ್ಕೊಂದು ತುರಾಯಿ, ಒಂದರ್ಥದಲ್ಲಿ ಪೇಟೆಯ ರಾಜಾ ಹಲಗಿ). ಹುಣ್ಣಿಮೆಯ ದಿನ ಊರಿನ ಖಾತೆದಾರರ ಮನೆಯಿಂದ ಬೆಂಕಿ ತಂದು (ಶತಮಾನಗಳಿಂದ ಅವರ ಮನೆಯಿಂದಲೆ ಬೆಂಕಿ ತರುವುದು ಸಂಪ್ರದಾಯ), ಮೊದಲು ಕಿಲ್ಲಾದ ಕಾಮದಹನದಿಂದ ಸಾಂಪ್ರದಾಯಿಕ ಬಾಗಲಕೋಟೆ ಹೋಳಿ ಪ್ರಾರಂಭ. ಅದೇ ಬೆಂಕಿಯಿಂದ ಊರಿನ ಎಲ್ಲ ಪ್ರಮುಖ ಸ್ಥಳಗಳ ಕಾಮದಹನ ಮುಗಿಸುವ ಹೊತ್ತಿಗೆ ಚುಮುಚುಮು ಬೆಳಕು. ಆಗ ಪ್ರಾರಂಭ ಸೋಗಿನ ಬಂಡಿಗಳ ನಗರ ಪ್ರದಕ್ಷಿಣೆ, ಮೊದಲ ದಿನ ಕಿಲ್ಲಾದ ಸರದಿ ಬಸವಣ್ಣ, ರಾಮ್-ಲಕ್ಷ್ಮಣ-ಹನಮಂತ, ಮಹಾಭಾರತದ ಅನೇಕ ಪಾತ್ರಗಳಿಂದ ಹಿಡಿದು ಗಾಂಧಿ, ಅಂಬೆಡ್ಕರ ಇತ್ಯಾದಿಗಳ ಪ್ರತಿಕೃತಿಗಳನ್ನು ಕಾಣಬಹುದು, ಪ್ರತಿ ವರ್ಷ ಕಾಣುವ ವೇಶಗಳೆಂದರೆ ಬಸವಣ್ಣ, ಅಲ್ಲಮಪ್ರಭು, ಕಿತ್ತೂರ ಚೆನ್ನಮ್ಮ, ಶಿವಾಜಿ ಇತ್ಯಾದಿ (ಸೋಗಿನ ಬಂಡಿಗಳನ್ನು ೫ ದಿನಗಳ ಕಾಲ ಒಂದೊಂದು ಪೇಟೆಯವರು ಒಂದೊಂದು ದಿನದಂತೆ ಈಗಲೂ ಕಾಣಬಹುದು). ಸ್ವಲ್ಪ ಬಿಸಿಲೇರಿ ೯ – ೧೦ ಗಂಟೆಗೆ ಬಣ್ಣ ಪ್ರಾರಂಭ.“ಕಾಮಣ್ಣನ ಮಕ್ಳು,ಕಳ್ಳಸೂ.. ಮಕ್ಳು…ಎನೇನು ಕದ್ದರು, ಕಳ್ಳು ಕಟಗಿ ಕದ್ದರು” ಎಂದು ಅರಚುತ್ತಾ ಜೊತಗೆ ಹಲಗೆಯ ಪಕ್ಕವಾದ್ಯ,ಲಬೊ ಲಬೊ ಅಂತಾ ಹೊಯ್ಕೊಳ್ಳವ ಹಿನ್ನಲೆ ಗಾಯನ ಒಂದು ಲೋಕವೇ ಸೄಷ್ಟಿಸಿಬಿಡುತ್ತದೆ. ಮೂರು ದಿನಗಳ ಉತ್ಸವವಿದು, ಗಂಡು-ಹೆಣ್ಣು, ಮಕ್ಕಳು-ಯುವಕರು-ಮುದುಕರು ಎನ್ನದೆ ಮೂರು ದಿನಗಳ ಕಾಲ ಬಣ್ಣಗಳ ಇಂದ್ರನಗರಿಯನ್ನೆ ಧರೆಗಿಳಿಸುತ್ತದೆ. ಯುವಕರನ್ನಂತೂ ಹಿಡಿಯುವವರೆ ಇಲ್ಲ ಮೂರು ದಿನಗಳ ಕಾಲ ಇವರದ್ದೆ ರಾಜ್ಯಭಾರ, ವರ್ಷದ ಎಲ್ಲಾ ದಿನಗಳಲ್ಲಿ “ಮಂಗ್ಯಾತನಕ್ಕೆ” ಮತ್ತು “ಹುಡಗಾಟಕ್ಕೆ” ನಿಷೇದವಿದ್ದರೂ ಹೋಳಿಯ ಸಮಯದಲ್ಲಿ ಪೂರ್ಣ ವಿನಾಯತಿ. ಕಾಲೇಜು ಹುಡುಗರಂತೂ ಬಣ್ಣ ಬಳಿದುಕೊಂಡು ಸುಂದರ ಹುಡುಗಿಯರ ಮನೆಗಳ ಹತ್ತಿರ ಲೇಡಿಜ್ ಹಾಸ್ಟೆಲಗಳ ಮುಂದೆ ಗಲಾಟೆ ಮಾಡಿದ್ದೇ ಮಾಡಿದ್ದು. ಇನ್ನೂ ಹುಡುಗಿಯರು, ಮಕ್ಕಳು ಮನೆಗಳ ಮುಂದೆ ಅಕ್ಕಪಕ್ಕದವರಿಗೆ ಬಣ್ಣ ಹಚ್ಚಿ ತಾವು ಕಡಿಮೆಯಿಲ್ಲದಂತೆ ಗಲಾಟೆ ಎಬ್ಬಿಸುತ್ತಾರೆ. ಇವರನ್ನು ನೋಡಿ ನಗುತ್ತಾ ಕುಳಿತಿರುವ ನಿವೃತ್ತರು ತಮ್ಮ ಯೌವನದ ದಿನಗಳನ್ನು ಮೇಲಕು ಹಾಕುತ್ತಾ ಗಲ್ಲಕ್ಕೆ, ಹಣೆಗೆ ಸಂಪ್ರದಾಯವೊ ಬಣ್ಣ ಹಚ್ಚಿಸಿಕೊಳ್ಳುತ್ತಾರೆ. ಆಯಕಟ್ಟಿನ ಜಾಗಗಳಲ್ಲಿ ಡಕ್- ಸೌಂಡ ಸಿಸ್ಟಮ್ ಹಚ್ಚಿ ಕುಣಿದದ್ದೆ ಕುಣಿದದ್ದು.

ಸಾಯಂಕಾಲ ಪ್ರಾರಂಭ ಬಣ್ಣದ ಬಂಡಿಗಳ ಭಾರಾಟೆ, ಆವತ್ತಿನ ಬಣ್ಣದ ಗಾಡಿ ಓಣಿಯವರು ಊರಿನ ಮಿಕ್ಕ ಓಣಿಗಳಿಗೆ ಬಂಡಿ (ಎತ್ತಿನ ಗಾಡಿ)ಗಳಲ್ಲಿ, ಟ್ರಾಕ್ಟರಗಳಲ್ಲಿ ಡ್ರಮಗಳನ್ನು ಬಣ್ಣದ ನೀರು ತುಂಬಿಸಿಕೊಂಡು ಹೋಗುತ್ತಾರೆ. ದಾರಿಗಳಲ್ಲಿ ಆಯಾ ಓಣಿಯವರೂ ಕೂಡಾ ಮನೆಗಳ ಮುಂದೆ, ಮಾಳಿಗೆಗಳಲ್ಲಿ ಬಣ್ಣದ ನೀರಿನ ಡ್ರಮಗಳನ್ನು ತುಂಬಿಸಿಟ್ಟುಕೊಂಡು ಅವರನ್ನು ಸ್ವಾಗತಿಸುತ್ತಾರೆ. ಅವರು ಇವರಿಗೆ, ಇವರು ಅವರಿಗೆ ಬಣ್ಣದ ಎರಚಾಟವಾಡುತ್ತಾರೆ ಅದು ಯಾವ ಯುದ್ಧಕ್ಕೂ ಕಡಿಮೆಯಿರುವುದಿಲ್ಲ. ಇಬ್ಬರೂ ಒಬ್ಬರಿಗೊಬ್ಬರು ಬಣ್ಣ ಎರಚಾಡುತ್ತ, ಹೊಳಿಯ ಶುಭಾಷಯ ತಿಳಿಸುತ್ತಾ ಬಣ್ಣದ ಗಾಡಿಯವರು ಮುಂದೆ ಸಾಗುತ್ತಾರೆ. ಇದು ಮೂರು ದಿನಗಳೂ ನೆಡೆಯುತ್ತದೆ. ಕೋನೆಯ ದಿನವಂತೂ ಇದರ ಭರಾಟೆ ಮುಗಿಲು ಮುಟ್ಟುತ್ತದೆ. ಕೆಲವರಂತೂ ಅಲ್ಲಿಯೆ ಶಾಂಪೂ ಒಯ್ದು ತಲೆತೊಳೆದುಕೊಳ್ಳುತ್ತಾರೆ. ಬಣ್ಣದ ನೀರಿನ ಎರಚಾಟದಲ್ಲಿ ಕೆಲವೊಮ್ಮೆ ಕಣ್ಣುಗಳಿಗೆ ಹಾನಿಯಾಗುವ ಸಂಭವವು ಇರುತ್ತದೆ ( ಅಷ್ಟೊಂದು ಜೋರಾಗೆ ಎರಚಡುತ್ತಾರೆ). ಕೋನೆಯದಿನ ಕೆಲವೊಮ್ಮೆ ಮನೆಗೆ ಬರಿಮೈಯಲ್ಲಿ ಹೋಗುವ ಸಂಭವವೂ ಬರುತ್ತದೆ, ಗೆಳೆಯರು ಒಬ್ಬರದ್ದೊಬ್ಬರ ಬಟ್ಟೆ ಹರಿಯುತ್ತಾರೆ (ಪೂರ್ತಿಯಾಗಲ್ಲ ಮಾನ ಮುಚ್ಚುವಷ್ಟನ್ನು ಉಳಿಸುತ್ತಾರೆ). ಅವತ್ತು ಎಲ್ಲರೂ ಗೆಳೆಯರೆ. ಒಮ್ಮೆ ಬಣ್ಣದ ಗಾಡಿಗಳು ಮುಕ್ತಾಯದ ಗಡಿ ಮುಟ್ಟಿದಾಗ ಮುಗಿಲು ಮುಟ್ಟುವಂತೆ ಲಬೋ.. ಲಬೋ.. ಕೂಗು ಮುಗಿಲು ಮುಟ್ಟುತ್ತದೆ.

ಇತ್ತಿಚಿಗೆ ಎಲ್ಲ ಊರುಗಳಂತೆ ಬಾಗಲಕೋಟೆಯಲ್ಲು ಹಬ್ಬಗಳು ಮತ್ತು ಅವುಗಳ ಆಚರಣೆ ಕಡಿಮೆಯಾಗುತ್ತಿದೆ. ಊರಿನ ಹೆಚ್ಚಿನ ಯುವಕರು ಬದುಕಿನ ದಾರಿಗಾಗಿ ಬೆಂಗಳುರು ಸೇರಿರುವುದೆ ಕಾರಣವಾಗಿದೆ. ಆದರೆ ನಾವು ಕೆಲವು ಗೆಳೆಯರು ಈ ಸಾರಿ ಹೋಳಿಗೆ ಊರಲ್ಲಿ ಸೆರುವುದಾಗಿ ಅಂದುಕೊಂಡಿದ್ದೇವೆ. ಊರನ್ನೇನೊ ಕೃಷ್ಣೆಗೆ ಅರ್ಪಿಸಿದ್ದಾಗಿದೆ*, ಪದ್ಧತಿಗಳನ್ನಾದರು ಊಳಿಸಿಕೊಳ್ಳೋಣ ಎಂಬ ಅನಿಸಿಕೆ ನಮ್ಮದು, ನೀವೇನಂತಿರಿ?

* ಬಾಗಲಕೋಟೆ ಅಲಮಟ್ಟಿ ಹಿನ್ನೀರಿನಲ್ಲಿ ಭಾಗಶಃ ಮುಳಗಿ, ಅಲ್ಲಿಯೇ ಐದು ಕಿ.ಮಿ. ದೂರದಲ್ಲಿ “ನವನಗರ”ವಾಗಿದೆ.

ಉತ್ತರ ಕರ್ನಾಟಕದ ಹೋಳಿ ಆಚರಣೆಯ ಬಗ್ಗೆ ಇನ್ನೊಂದು ಲೇಖನ ಸಂತೋಷ ಪಾಟೀಲರ “ಅಮೃತ ಸಿಂಚನ” ದಲ್ಲಿ.

7 Responses to “ಬಾಗಲಕೋಟೆ ಹೋಳಿ: ಹೀಗೆ ಸವಿ ಸವಿ ನೇನಪು…”


  1. 1 srinivasa March 21, 2008 at 10:50 am

    ಕಾಮನ ಹುಣ್ಣಿಮಿ ಬಗ್ಗೆ ಭಾಳ ಚಂದ ಬರ್ದೀರ್ರೀ ಯಪ್ಪಾ. ಕಣ್ಣಿಗೆ ಕಟ್ಟಿದಂತಿದೆ. ಈ ಮುಂಬಯಿ ಶಹರಿನಲ್ಲಿ ಬರೀ ಸೋಗು ಅಲ್ಲೇನ್ರೀ ಸರ. ನಮ್ಮೂರೇ ಚಂದ ನಮ್ಮವರೇ ಅಂದ ಕನ್ನಡ ಭಾಷೆಯೇ ಪರಮಾನಂದ

    ಒಳ್ಳೆಯದಾಗಲಿ

    ಗುರುದೇವ ದಯಾ ಕರೊ ದೀನ ಜನೆ

  2. 2 ಮಲ್ಲಿಕಾರ್ಜುನಗೌಡ March 22, 2008 at 5:51 pm

    ಯಾಕ್ರೀ, ಊರಿಗೆ ಹೋಗ್ತೀನಿ ಅಂದಿದ್ರೀ ಹೋಗ್ಲಿಲ್ಲೆನು? ಅಂದಂಗ ಈ ಸಲದ್ದು ಹೊಯ್ಕೋಳೋ ಕಾರ್ಯಕ್ರಮ ಮಿಸ್ ಮಾಡ್ಕೊಂದ್ರಿ ಅಂದಂಗಾತು!! ಏನ್ ಚೆಂದ ಇರ್ತದಲ್ಲೆನ್ರೀ ನಮ್ಮೊರ್ ಹೋಳಿ ಹುಣ್ಣಿವಿ? ನಿಜ ಹೇಳಬೇಕಂದ್ರ ಬಾಗಲಕೋಟೆ ಹೋಳಿ ಹುಣ್ಣಿವಿನ ಸ್ಪೆಷಲ್ ನೋಡ್ರೀ. ಎಲ್ಲಾ ಸಂಪ್ರದಾಯಕ್ಕ ತಕ್ಕಂಗ ಮಾಡ್ತಾರ. ನಾನು ೨ ಸಲ ಅಲ್ಲೇ ಮಾಡೀನಿ. ಏನು ವಿಶೇಷ ಇರ್ತದ ಅದ್ರಲ್ಲಿ, ಮತ್ತ ಅದನ್ನ ಸರಿಯಾಗಿ ವಿವರಣ ಮಾಡೀರಿ? ಬಾಳ ಖುಷಿ ಆತು. ನಾನು ಈ ಸಲ ನಮ್ಮೊರ ಹೋಳಿ ಹುಣ್ಣಿವಿ ಮಿಸ್ ಮಾಡ್ಕೊಂಡೆ. ನಿಮ್ ಬ್ಲಾಗ್ ಓದಿ ಸ್ವಲ್ಪ ಖುಷಿ ಆತು. ಕ್ವಾಟಿಗೆ ಹೋಗಿ ಬಂದಂಗಾತು.

  3. 3 ಸಂತೋಷಕುಮಾರ March 26, 2008 at 3:01 pm

    ನಮ್ ಕಡೆ ಆದ ಹಂಗೆ ಇಲ್ಲಿ ಹೋಳಿ ಆಗಲ್ಲಾ.. ಬಾಗಲಕೋಟೆ ಹೋಳಿ ಬಗ್ಗೆ ಭಾಳ ಕೇಳಿದ್ದೆ.. ಈ ಬಾರಿ ನಾನೂ ಹೋಳಿಗೆ ಊರಿಗೆ ಹೋಗಿದ್ದೆ. ಮೇಲೆ ಮಳೆ ಬೀಳ್ತಾ ಇದ್ದರೆ ಕಾಮಣ್ಣನ ಕಟ್ಟಿಗೆಗೆ ಬೆಂಕೆ ಹತ್ತಾನೇ ಇಲ್ಲಾ.. ಭಲೇ ಮೋಜಿನ ವಿಷ್ಯ.. ಸೋಗಂತೂ favorite part in ಹೋಳಿ.. :)

  4. 4 ಶೆಟ್ಟರು (Shettaru) March 28, 2008 at 12:14 pm

    ತ.ವಿ.ಶ್ರೀ., ಮತ್ತು ಗೌಡ್ರೆ (ಇಬ್ಬರೂ ಗೌಡ್ರೆ),

    ತಮ್ಮ ಮೆಚ್ಚುಗೆಗೆ ಧನ್ಯವಾದಗಳು.

    ನಾನೂ ಊರಿಗೆ ಹೋಗಿದ್ದೆ, ಭಗವಂತನೂ ಬೇಜಾರಾಗಿ ತಾನೂ ಓಕುಳಿಯಾಟಕ್ಕೆ ಜೋತೆಯಾದ, ನಾವು ಬಣ್ಣದ ನೀರಿನ ಎರೆಚಾಟ ಮುಗಿಸಿದೆವು, ಅವನಿನ್ನು ಎರಚಾಡುತ್ತಲೇ ಇದ್ದಾನೆ…(ಮಳೆ ತುಂಬಾ ಇದೆ)

    ಹೀಗೆ ಬರುತ್ತಾ ಇರಿ.

    ಪ್ರೀತಿಯಿರಲಿ

    ಶೆಟ್ಟರು

  5. 5 Vikas Hegde March 28, 2008 at 12:44 pm

    ಶೆಟ್ರೇ ನಮಸ್ತೆ,

    ನಿಮ್ಮೂರಿನ ಹೋಳಿ ಆಚರಣೆಗಳ ವಿವರ ಓದ್ತಾ ಇದ್ರೆ ಆಶ್ಚರ್ಯ ಆಗತ್ತೆ. ಹೆಂಗಪ್ಪಾ ಬಂತೂ ಈ ತರಹದ ಪದ್ಧತಿಗಳೆಲ್ಲಾ ಅಂತ ! ಸಂತೋಷ ಕುಮಾರ್ ಪಾಟೀಲ್ರು ಅವರೂರಿನ ಹೋಳಿ ಆಚರಣೆ ಬಗ್ಗೆ ಬರ್ದಿದಾರೆ. ಮಸ್ತಾಗಿದೆ. ಜೊತೆಗೆ ಹಾಕಿದೀರಲ್ಲ ಫೋಟೋ ಅದಂತೂ ಮಸ್ತ್ ಮಸ್ತ್. ನಮ್ಮ ಕಡೆ (ದಕ್ಷಿಣ ಕರ್ನಾಟಕ)ದಲ್ಲಿ ಹೋಳಿ ಇಷ್ಟೆಲ್ಲಾ ಜೋರಾಗಿ ಇಲ್ಲ.

    -ವಿಕಾಸ್ ಹೆಗಡೆ

  6. 6 ಶೆಟ್ಟರು (Shettaru) March 28, 2008 at 3:51 pm

    ಥ್ಯಾಂಕ್ಸ್ ಸರ ತಮ್ಮ ಮೆಚ್ಚುಗೆಗೆ,

    ಇನ್ನು ಎಷ್ಟೊ ಪದ್ಧತಿಗಳು, ಸಂಪ್ರದಾಯಗಳು ಅಳಿಸಿ ಹೋಗಿವೆ, ಕೆಲವೊಂದು ಅಳಿವಿನಂಚಿನಲ್ಲಿವೆ. ಅಂತಹ ಕೆಲವು ಆಚರಣೆಗಳಲ್ಲಿ ಒಂದು ಈ ಹೋಳಿ ಹಬ್ಬ.

    ಆಗಾಗ ಬರುತ್ತಾ ಇರಿ.

    ಪ್ರೀತಿಯಿರಲಿ

    ಶೆಟ್ಟರು


Leave a Reply




a

Blog Stats

  • 8,446 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು