
ಕೃಷ್ಣೆಯ ದಡದಲ್ಲಿ
ಗಾಳಹಾಕಿ ಹುಡುಕುತ್ತಿದ್ದೆನೆ
ನನ್ನ ಆ ದಿನದ ನೆನಪುಗಳ.
ನೀರಲ್ಲಿ ಹುಡುಕುತ್ತಿದ್ದೆನೆ
ಬಾಲ್ಯದ ನನ್ನ ಆಟಿಕೆಗಳ
ಯೌವನದತ್ತ ಹೆಜ್ಜೆ ಗುರುತುಗಳ
ಅಪ್ಪನಿಂದ ಎಟು ತಿಂದು
ಅಳುತ್ತಾ ಸೇರುತ್ತಿದ್ದ ಮನೆಯ ಆ ಮೂಲೆ,
ಹಗಲು ಹೋತ್ತೆ ಬಳಿ ಹೋಗಲು
ಹೆದರುತ್ತಿದ್ದ ಆ ದೆವ್ವದ ಮನೆ.
ಮೊದಲ ಸಲ ಅಳುತ್ತಾ ಹೋಗಿದ್ದ ನನ್ನ ಶಾಲೆ,
ಬಿದ್ದೆಳುತ್ತಾ ಸೈಕಲ್ ಕಲಿತ ಆ ರಸ್ತೆ,
ದೊಡ್ಡ ಹೆಜ್ಜೆ ಹಾಕುತ್ತಾ, ದೇವರಿಗಿಂತ ಹೆಚ್ಚು
ಪ್ರೀಯವಾಗಿದ್ದ ಆ ಪ್ರಸಾದ ಸಿಗುತ್ತಿದ್ದ ಗುಡಿ.
ಚೆಡ್ಡಿಯ ದಿನಗಳಲ್ಲೆ ಪ್ರೇಮಪತ್ರ
ಬರೆಯಿಸಿದ ‘ಅವಳ’ ಮನೆ,
ಅವಳ ಮದುವೆ ಹಂದರದ ಆ ಗುಳಿಗಳು
ಅವುಗಳಲ್ಲೆ ಮುಚ್ಚಿ ಬಂದ ಅವಳ ನೆನಪುಗಳು.
ಹೆಗಲ ಮೇಲೆ ಕೈ ಹಾಕಿ ಗೆಳೆಯರೆಲ್ಲ ಹಾರಾಡಿದ್ದು,
ಹಾರಾಡಿದ್ದು ಮುಗಿದಿದ್ದೆ ಒಬ್ಬಳಿಗಾಗಿಗೆಯೆ ಬಡಿದಾಡಿದ್ದು
ಮಾತು ಬಿಟ್ಟಿದ್ದು, ಅದು ಮರೆತು ನಂತರ
ಅವಳ ಮದುವೆಯಲ್ಲಿ ನಾವೆಲ್ಲ ಓಡಾಡಿ ಊಟ ಬಡಿಸಿದ್ದು.
ವಾರಕ್ಕೊಮ್ಮೆ ಸೇರುತ್ತಿದ್ದ ಶನಿವಾರದ ಆ ಸಂತೆ
ಅಲ್ಲಷ್ಟೆ ಸಿಗುತ್ತಿದ್ದ ಮುರುನಾಳದ ಬೆಣ್ಣಿ,
ಬೇವೂರು ಶಾಂತವ್ವನ ಬಜಿ, ಆ ಕೆಂಪನೆಯ ಪೇರಲ ಹಣ್ಣು.
ಗೆಳೆಯ ಮುಳುಗಿದ್ದು ಕೇವಲ
ಮನೆ-ಮಸಿದಿ-ಮಠಗಳಷ್ಟೆ ಅಲ್ಲ,
ನಮ್ಮ ಬಾಲ್ಯ, ಬಾಲ್ಯದ ಗುರುತುಗಳು, ಮತ್ತು
ಮತ್ತದರ ಮಸುಕು ನೆನಪುಗಳು.
(ಬಾಗಲಕೋಟೆ ಭಾಗಶ: ಮುಳುಗಿ ಈಗ ಸುಮಾರು ೭ ವರ್ಷಗಳು, ಇವತ್ತಿನವರೆಗೂ ಸುಮ್ಮನೆ ನನ್ನಲ್ಲಿ ಊಳಿದು ಹೋಗಿದ್ದ ನೆನಪುಗಳನ್ನು ಎಬ್ಬಿಸುವ ಪ್ರಯತ್ನದಲ್ಲಿ ಎದ್ದು ನಿಂತ ಭಾವನೆಗಳು ಇಷ್ಟೆ, ಇದಕ್ಕಿಂತ ಇನ್ನೂ ಎಷ್ಟೊ ಭಾವನೆಗಳು ಹೋರಬರುವ ಹಾದಿ ದೊರಕದೆ ನನ್ನಲ್ಲೆ ಕಾದು ಕುಳಿತಿದ್ದಾವೆ, ಆಗಾಗ ಹೆಕ್ಕಿ ನಿಮಗಷ್ಟು ಪರಿಚಯಿಸುವ ಹಂಬಲ ನನ್ನದು.
ನಮಗೆಲ್ಲರಿಗೂ ಒಂದು ಮುದ್ದಾದ ಬಾಲ್ಯವಿದೆ, ಯೌವನದತ್ತ ಸಾಗಿದ ದಾರಿ ನಿಮಗಿನ್ನೂ ಸಾಕ್ಷಿಯಾಗಿ ನಿಂತು ನಿಮ್ಮ ತುಟಿಯಂಚಿಗೆ ನಗೆಯಾಗುತ್ತದೆ, ಮನಸ್ಸು ಉಲ್ಲಾಸಗೊಳಿಸುತ್ತದೆ. ನಮಗದರ ಭಾಗ್ಯವಿಲ್ಲ ನಮ್ಮ ಬಾಲ್ಯಕ್ಕೆ ಸಾಕ್ಷಿಯಾಗಿದ್ದ ಬೀದಿಗಳಿಲ್ಲ, ನಾವು ಬೀರಿದ ಕಲ್ಲುಗಳಿಗೆ ದೂರು ಹೇಳಲು ಆ ಹಣ್ಣಿನ ಮರಗಳಿಲ್ಲ, ನಾವು ದಿನಾ ರಾತ್ರಿ ಕಣ್ಣುಮುಚ್ಚಾಲೆಯಾಡುವಾಗ ಅಡಗಿಕೊಳ್ಳುತ್ತಿದ್ದ ಆ ಪೊಳ್ಳು ಜಾಗಗಳಿಲ್ಲ ಮೇಲಾಗಿ ನಾವು ಹುಟ್ಟಿದ ಮನೆಗಳಿಲ್ಲ, ನಮ್ಮ ತೋಟ್ಟಿಲು ಕಟ್ಟಿದ್ದ ತೋಲೆಗಳು, ನಾವು ಮೊದಲು ದಾಟಿದ ಹೋಸ್ತಿಲಗಳಿಲ್ಲ, ನಾವು ಕಲಿತ ಶಾಲೆಗಳುಳದಿಲ್ಲ ಒಟ್ಟಾರೆಯಾಗಿ ನಮ್ಮ ಬಾಲ್ಯಕ್ಕೆ ಯಾವುದೆ ಸಾಕ್ಷಿಗಳುಳದಿಲ್ಲ. ನಮ್ಮ ಬಾಲ್ಯದ ನೇನಪುಗಳು ತುಟಿಯಂಚಿಗೆ ನಗು ತಂದರೂ ಅದರೊಂದಿಗೆ ಕಣ್ಣಂಚಲಿ ನೀರು ತರದೆ ಇರುವುದಿಲ್ಲ.)
(ಚಿತ್ರ: ರವಿ ಶರ್ಮಾ, ಫ್ರಂಟಲೈನ)



Recent Comments