ಕಳೆದುಹೋಗಿದೆ ಬಾಲ್ಯ: ಕೃಷ್ಣಾರ್ಪಣ

ಕೃಷ್ಣಾರ್ಪಣ

ಕೃಷ್ಣೆಯ ದಡದಲ್ಲಿ
ಗಾಳಹಾಕಿ ಹುಡುಕುತ್ತಿದ್ದೆನೆ
ನನ್ನ ಆ ದಿನದ ನೆನಪುಗಳ.

ನೀರಲ್ಲಿ ಹುಡುಕುತ್ತಿದ್ದೆನೆ
ಬಾಲ್ಯದ ನನ್ನ ಆಟಿಕೆಗಳ
ಯೌವನದತ್ತ ಹೆಜ್ಜೆ ಗುರುತುಗಳ

ಅಪ್ಪನಿಂದ ಎಟು ತಿಂದು
ಅಳುತ್ತಾ ಸೇರುತ್ತಿದ್ದ ಮನೆಯ ಆ ಮೂಲೆ,
ಹಗಲು ಹೋತ್ತೆ ಬಳಿ ಹೋಗಲು
ಹೆದರುತ್ತಿದ್ದ ಆ ದೆವ್ವದ ಮನೆ.

ಮೊದಲ ಸಲ ಅಳುತ್ತಾ ಹೋಗಿದ್ದ ನನ್ನ ಶಾಲೆ,
ಬಿದ್ದೆಳುತ್ತಾ ಸೈಕಲ್ ಕಲಿತ ಆ ರಸ್ತೆ,
ದೊಡ್ಡ ಹೆಜ್ಜೆ ಹಾಕುತ್ತಾ, ದೇವರಿಗಿಂತ ಹೆಚ್ಚು
ಪ್ರೀಯವಾಗಿದ್ದ ಆ ಪ್ರಸಾದ ಸಿಗುತ್ತಿದ್ದ ಗುಡಿ.

ಚೆಡ್ಡಿಯ ದಿನಗಳಲ್ಲೆ ಪ್ರೇಮಪತ್ರ
ಬರೆಯಿಸಿದ ‘ಅವಳ’ ಮನೆ,
ಅವಳ ಮದುವೆ ಹಂದರದ ಆ ಗುಳಿಗಳು
ಅವುಗಳಲ್ಲೆ ಮುಚ್ಚಿ ಬಂದ ಅವಳ ನೆನಪುಗಳು.

ಹೆಗಲ ಮೇಲೆ ಕೈ ಹಾಕಿ ಗೆಳೆಯರೆಲ್ಲ ಹಾರಾಡಿದ್ದು,
ಹಾರಾಡಿದ್ದು ಮುಗಿದಿದ್ದೆ ಒಬ್ಬಳಿಗಾಗಿಗೆಯೆ ಬಡಿದಾಡಿದ್ದು
ಮಾತು ಬಿಟ್ಟಿದ್ದು, ಅದು ಮರೆತು ನಂತರ
ಅವಳ ಮದುವೆಯಲ್ಲಿ ನಾವೆಲ್ಲ ಓಡಾಡಿ ಊಟ ಬಡಿಸಿದ್ದು.

ವಾರಕ್ಕೊಮ್ಮೆ ಸೇರುತ್ತಿದ್ದ ಶನಿವಾರದ ಆ ಸಂತೆ
ಅಲ್ಲಷ್ಟೆ ಸಿಗುತ್ತಿದ್ದ ಮುರುನಾಳದ ಬೆಣ್ಣಿ,
ಬೇವೂರು ಶಾಂತವ್ವನ ಬಜಿ, ಆ ಕೆಂಪನೆಯ ಪೇರಲ ಹಣ್ಣು.

ಗೆಳೆಯ ಮುಳುಗಿದ್ದು ಕೇವಲ
ಮನೆ-ಮಸಿದಿ-ಮಠಗಳಷ್ಟೆ ಅಲ್ಲ,
ನಮ್ಮ ಬಾಲ್ಯ, ಬಾಲ್ಯದ ಗುರುತುಗಳು, ಮತ್ತು
ಮತ್ತದರ ಮಸುಕು ನೆನಪುಗಳು.

(ಬಾಗಲಕೋಟೆ ಭಾಗಶ: ಮುಳುಗಿ ಈಗ ಸುಮಾರು ೭ ವರ್ಷಗಳು, ಇವತ್ತಿನವರೆಗೂ ಸುಮ್ಮನೆ ನನ್ನಲ್ಲಿ ಊಳಿದು ಹೋಗಿದ್ದ ನೆನಪುಗಳನ್ನು ಎಬ್ಬಿಸುವ ಪ್ರಯತ್ನದಲ್ಲಿ ಎದ್ದು ನಿಂತ ಭಾವನೆಗಳು ಇಷ್ಟೆ, ಇದಕ್ಕಿಂತ ಇನ್ನೂ ಎಷ್ಟೊ ಭಾವನೆಗಳು ಹೋರಬರುವ ಹಾದಿ ದೊರಕದೆ ನನ್ನಲ್ಲೆ ಕಾದು ಕುಳಿತಿದ್ದಾವೆ, ಆಗಾಗ ಹೆಕ್ಕಿ ನಿಮಗಷ್ಟು ಪರಿಚಯಿಸುವ ಹಂಬಲ ನನ್ನದು.

ನಮಗೆಲ್ಲರಿಗೂ ಒಂದು ಮುದ್ದಾದ ಬಾಲ್ಯವಿದೆ, ಯೌವನದತ್ತ ಸಾಗಿದ ದಾರಿ ನಿಮಗಿನ್ನೂ ಸಾಕ್ಷಿಯಾಗಿ ನಿಂತು ನಿಮ್ಮ ತುಟಿಯಂಚಿಗೆ ನಗೆಯಾಗುತ್ತದೆ, ಮನಸ್ಸು ಉಲ್ಲಾಸಗೊಳಿಸುತ್ತದೆ. ನಮಗದರ ಭಾಗ್ಯವಿಲ್ಲ ನಮ್ಮ ಬಾಲ್ಯಕ್ಕೆ ಸಾಕ್ಷಿಯಾಗಿದ್ದ ಬೀದಿಗಳಿಲ್ಲ, ನಾವು ಬೀರಿದ ಕಲ್ಲುಗಳಿಗೆ ದೂರು ಹೇಳಲು ಆ ಹಣ್ಣಿನ ಮರಗಳಿಲ್ಲ, ನಾವು ದಿನಾ ರಾತ್ರಿ ಕಣ್ಣುಮುಚ್ಚಾಲೆಯಾಡುವಾಗ ಅಡಗಿಕೊಳ್ಳುತ್ತಿದ್ದ ಆ ಪೊಳ್ಳು ಜಾಗಗಳಿಲ್ಲ ಮೇಲಾಗಿ ನಾವು ಹುಟ್ಟಿದ ಮನೆಗಳಿಲ್ಲ, ನಮ್ಮ ತೋಟ್ಟಿಲು ಕಟ್ಟಿದ್ದ ತೋಲೆಗಳು, ನಾವು ಮೊದಲು ದಾಟಿದ ಹೋಸ್ತಿಲಗಳಿಲ್ಲ, ನಾವು ಕಲಿತ ಶಾಲೆಗಳುಳದಿಲ್ಲ ಒಟ್ಟಾರೆಯಾಗಿ ನಮ್ಮ ಬಾಲ್ಯಕ್ಕೆ ಯಾವುದೆ ಸಾಕ್ಷಿಗಳುಳದಿಲ್ಲ. ನಮ್ಮ ಬಾಲ್ಯದ ನೇನಪುಗಳು ತುಟಿಯಂಚಿಗೆ ನಗು ತಂದರೂ ಅದರೊಂದಿಗೆ ಕಣ್ಣಂಚಲಿ ನೀರು ತರದೆ ಇರುವುದಿಲ್ಲ.)

(ಚಿತ್ರ: ರವಿ ಶರ್ಮಾ, ಫ್ರಂಟಲೈನ)

4 Responses to “ಕಳೆದುಹೋಗಿದೆ ಬಾಲ್ಯ: ಕೃಷ್ಣಾರ್ಪಣ”


  1. 1 ಸುನಾಥ January 19, 2009 at 9:53 pm

    ಶೆಟ್ಟರ,
    ನನ್ನ ಹೃದಯದ ಒಂದು ತಂತೀನ ಮೀಟಿದಿರಿ. ಬಾಲ್ಯದ ನೆನಪುಗಳು ಎಲ್ಲಾರಿಗೂ ಪ್ರಿಯವಾದಂತಹವು.
    ಬಾಗಲಕೋಟಿಯೊಳಗಿನ ನೆನಪಿನ ಗುರುತುಗಳು ಮುಳುಗಿದ್ದಾವು. ಆದರ,’ಸ್ಥಾವರಕ್ಕಳಿವುಂಟು,ನೆನಪುಗಳಿಗಳಿವಿಲ್ಲ’, ಅಲ್ಲೇನ್ರಿ?

  2. 2 ಶೆಟ್ಟರು (Shettaru) January 20, 2009 at 8:32 am

    ಕಾಕಾ,

    ನಿಮ್ಮ ಹೃದಯದ ತಂತಿ ಮೂಡಿಸಿದ ನಾದಕ್ಕೆ ನಮ್ಮದೊಂದು ಶರಣು.

    ’ಸ್ಥಾವರಕ್ಕಳಿವುಂಟು,ನೆನಪುಗಳಿಗಳಿವಿಲ್ಲ’ ನಿಜ,
    ಮಸುಕು ನೆನಪುಗಳಿಗೆ ಬ್ಯಾಟರಿ ಬಿಟ್ಟು ನೋಡಲಷ್ಟಾದರೂ ಅವಕಾಶ ಬೇಕಿತ್ತಲ್ಲ? ಆ ಅವಕಾಶವೂ ನಮಗಿಲ್ಲ. ನಮ್ಮ ನೆನಪುಗಳಿಗೆ ‘ಕಾಲ’ನಷ್ಟೆ ಕಾಲಾ’ಪಾನಿ’ಯೂ ಅಡ್ಡಿಯಾಗಿದೆ.

    ಪ್ರೀತಿಯಿರಲಿ
    -ಶೆಟ್ಟರು

  3. 3 ಗೆಳೆಯ January 20, 2009 at 9:47 am

    “ಹೆಗಲ ಮೇಲೆ ಕೈ ಹಾಕಿ ಗೆಳೆಯರೆಲ್ಲ ಹಾರಾಡಿದ್ದು,
    ಹಾರಾಡಿದ್ದು ಮುಗಿದಿದ್ದೆ ಒಬ್ಬಳಿಗಾಗಿಗೆಯೆ ಬಡಿದಾಡಿದ್ದು
    ಮಾತು ಬಿಟ್ಟಿದ್ದು, ಅದು ಮರೆತು ನಂತರ
    ಅವಳ ಮದುವೆಯಲ್ಲಿ ನಾವೆಲ್ಲ ಓಡಾಡಿ ಊಟ ಬಡಿಸಿದ್ದು.”

    ಒಬ್ರ ಇಲ್ಲಾ ಇಬ್ರ, ಎಲ್ಲಾ ಹುಡುಗ್ಯಾರ ಸಮಂದ ಬಡಿದಾಡಿದವರು ನೀವು.

    -ಗೆಳೆಯ

  4. 4 Rahul January 20, 2009 at 4:58 pm

    Balyakke yavude sakshigala hangilla, Balyada nenapugalu amulya

    Rahul


Leave a Reply




a

Blog Stats

  • 8,228 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು