ಮನಸ್ಸಿನ ಕಸಿವಿಸಿ ಮತ್ತು ಇಂಡಿಕೇಟರ್ ಹೊಡೆಯುವುದು

ಇವತ್ತ್ಯಾಕೋ ಬೆಳಿಗ್ಗೆಯಿಂದ ಮನಸ್ಸಿಗೇನೊ ಕಸಿವಿಸಿ, ಎನೋ ಕಳೆದುಕೊಂಡಂತೆ ಭಾವ, ಯಾರೊ ಒಬ್ಬಂಟಿಯಾಗಿ ನನ್ನನ್ನು ಬಿಟ್ಟುಹೋದಂತ ಭಯ ಎಲ್ಲವೂ ಸೇರಿ ನನ್ನನ್ನು ಖಿನ್ನತೆಗಿಡು ಮಾಡಿ ಇಡಿ ದಿನ ಕಳ್ಕೊಂಬಿಡ್ತಿನಿ ಅನ್ನಿಸಿಬಿಟ್ಟಿತ್ತು. ಹೀಗೆ ಅನ್ನಿಸುತ್ತಿದ್ದಾಗ ಸಮಯ ಬರಿ ಬೆಳಗಿನ ೭:೪೫, ಕೆಲವೊಬ್ಬರಿಗೆ (ಬೇರೆ ಯಾರಿಗೊ ಯಾಕೆ, ನನ್ನ ರೂಮ್ ಮೇಟಗೆ) ಇನ್ನು ಬೆಳಕಾಗಿರುವುದಿಲ್ಲ. ಆಗಲೆ ನನಗೆ ಜೀವನವೇ ಬೇಜಾರಾದಂತೆ, ಈ ದಿನ ಯಾಕೋ ನನಗೆ ಸರಿಯಿಲ್ಲವೆಂಬಂತೆ ಅನ್ನಿಸತೋಡಗಿದ್ದು ಸುಳ್ಳಲ್ಲ.

ಆಫಿಸಿಗೆ ಹೋಗುವಾಗ-ಬರುವಾಗ ದಿನದ ಅರ್ಧ ಸಮಯ ಮುಂಬಯಿ ಟ್ರಾಫಿಕ್ಕಿನಲ್ಲಿ ಕಳೆಯುವ ನನಗೆ ಈ ವಾಹನಗಳ ಭಾಷೆ ತಿಳೀಯಲಾರಂಭಿಸಿ ತುಸು ವರ್ಷಗಳೆ ಅದವು. ವಾಹನ ಚಾಲಕರ (ಕನ್ನಡದಲ್ಲಿ ಅಯ್ ಮೀನ್ “ಡ್ರೈವರ್”) ಮನಸ್ಸಿನ ಭಾವನೆಗಳನ್ನು “ಭಕೂಬಿ” i.e. ಯಥಾವತ್ತಾಗಿ ಪ್ರಕಟಿಸುತ್ತವೆ ಎಂಬುದು ಎಲ್ಲರಿಗೂ ತಿಳಿದಿದ್ದೆ. ತಮ್ಮ ಹಾರ್ನಗಳಲ್ಲೆ ಸಿಟ್ಟು, ಸೇಡವು, ಆಕ್ರೋಶಗಳನ್ನು ಸುಂದರವಾಗಿ ಅಷ್ಟೆ ಕರ್ಣಕಠೋರವಾಗಿ ವ್ಯಕ್ತಪಡಿಸುವುದು ಈ ಮೊದಲೆ ಹೇಳಿದಂತೆ ಎಲ್ಲರಿಗೂ ತಿಳಿದಿದ್ದೆ. ಆದರೆ ಇತ್ತಿಚಿಗೆ “ಜನ ಬದಲಾವಣೆ ಕೇಳ್ತಿದಾರೆ” ಅಂದ್ಕೊಂಡು ವಾಹನಗಳ ಚಾಲಕರು ಅವಗಳಿಗೆ ಹೋಸ ಭಾವನೆಗಳನ್ನು ಕಲಿಸುತ್ತಿರಬಹುದು.

ಇವತ್ತಷ್ಟೆ ನಾನು ಗಮನಿಸಿದಂತೆ ವಾಹನಗಳೆಲ್ಲ “ಇಂಡಿಕೇಟರ್ ಹೊಡೆಯಲಾರಂಬಿಸಿದ್ದಾವೆ”, ಇದೇನಿದು ಇಂಡಿಕೇಟರ್ ಹೊಡೆಯುವುದು? ಕಣ್ಣು ಹೊಡೆಯುವುದು ಗೋತ್ತಿತ್ತು, ಲೈನ ಹೊಡೆಯುವುದು ಗೊತ್ತಿತ್ತು, ಇದೇನಿದು ಹೋಸದು ಇಂಡಿಕೇಟರ್ ಹೊಡೆಯುವುದು ಅಂದ್ಕೊಂಡ್ರ? ಅಥವಾ ನಮ್ಮ ಬಾಗಲಕೋಟ ಹುಂಬ ಮಂದಿ ಬಡಿಯಾಕ ಏನು ಸಿಗಲಿಲ್ಲ ಅಂಥ ಇಂಡಿಕೇಟರ್ ತೊಗೊಂಡು ಹೊಡದದ್ದು ಅನ್ಕೊಂಡ್ರ?

ಹಾಗೆನಿಲ್ಲ, ಮುಂಬಯಿಯ ಟ್ರಾಫಿಕನಲ್ಲಿ ಸಿಕ್ಕಿ ಹಾಕೊಂಡು, ಮೊನ್ನೆ ತಾನೆ ಊರಿಂದ ತಂದ “ರಾಯಲ ಸೀಮಾ” ಎರಡೆ ದಿನಕ್ಕೆ ಮುಗಿದ ಬೇಸರಕ್ಕೊ, ಇಲ್ಲಾ …(ಪ್ರಥಮ ಪ್ಯಾರಾ)ಕ್ಕೊ ಬೇಜಾರಾಗಿ…(ರಾಯಲ ಸೀಮಾ, ಚಿಕ್ಕ ಪುಸ್ತಕವೇನು ಅಲ್ಲ, ಅದು ಓದಿಸಿಕೊಂಡು ಹೋಗುವ ವೇಗ,or in Kannada “ಸ್ಪೀಡ” ಹಾಗಿದೆ) ಹೋರಕ್ಕೆ ನೋಡುತ್ತಾ ಕುಳಿತಿದ್ದಾಗ ನೋಡಿದ ಘಟನೆ ಈ ಪೋಸ್ಟಗೆ ಕಾರಣವಾಯಿತು, ಎದುರಿನಿಂದ ಬರುತ್ತಿದ್ದ ದಾರಿಯಲ್ಲಿ ಅಷ್ಟೇನೂ ಟ್ರಾಫಿಕ್ ಇರಲಿಲ್ಲ, ಜಾಮ್ ಬಗ್ಗೆ ಸುಳಿವೇ ಸಿಗಲಿಲ್ಲ ಅದು ಬೇರೆ ಮಾತು.

ಆ ಕಡೆಯಿಂದ ಕಪ್ಪು ಬಣ್ಣದ ಒಂದು ಸ್ಕೋಡಾ ಕಾರು ಬರುತ್ತಿತ್ತು, ಅದರ ಹಿಂದೆ ಸಿಲ್ವರ್ ಕಲರಿನ ಹೋಂಡಾ ಸುಮ್ಮನೆ ಕೆಮ್ಮಿತು (ಹಾರ್ನಾಯಿಸಿತು, ಕನ್ನಡದಲ್ಲಿ) ಅಷ್ಟಕ್ಕೆ, ನಂಬೊಕೆ ಆಗ್ತಾಯಿಲ್ಲ ಆ ಬರಿ ಕೆಮ್ಮಿದ ಸದ್ದಿಗೆ ಸ್ಕೋಡಾ ಕಾರು ದಾರಿ ಮಾಡಿಕೊಟ್ಟಿತು, ಆಶ್ಚರ್ಯ ಅಷ್ಟೆ ಅಲ್ಲ ದಾಟಿ ಹೋದ ಹೋಂಡಾ ಕಾರು ಒಂದು ಸಾರಿ ತನ್ನ “ಇಂಡಿಕೇಟರ್” ಮಿಟುಕಿಸಿತು, ಅದಕ್ಕೆ ಪ್ರತಿಯಾಗಿ ಸ್ಕೋಡಾ ಕೂಡ ಒಂದು ಸಾರಿ ತನ್ನ “ಇಂಡಿಕೇಟರ್” ಮಿಟುಕಿಸಿತು, ಇದನ್ನು ನೋಡಿ ಭಲೆ ಮಜವೇನಿಸಿತು, ಪಕ್ಕದಲ್ಲೆ ನಿದ್ರೆಯಲ್ಲಿದ್ದ ಕಲಿಗನನ್ನು ಎಬ್ಬಿಸಿ ಈ ವಿಷಯ ಹೇಳಿದಾಗ, ಅವನು ಎಲ್ಲಾದರೂ ಬಾಂಬ ಎನಾದರು ಸ್ಪೋಟವಾಗಿರಬಹುದಾ ಎಂಬ ಅನುಮಾನವನ್ನು ತುಂಡರಿಸಿ, ನನ್ನ ಅನುಮಾನವನ್ನು ಮತ್ತು ನನ್ನನ್ನು ಸೇರಿಸಿ ಅವಮಾನಿಸುವ ಮುಖ ಹಿಚುಕಿ, ಅಲ್ಲಿ ನೆಡೆದಿದ್ದನ್ನು “ಮಷೀನ್ ಲ್ಯಾಂಗ್ವೇಜ”ನಿಂದ ಕಂಪೈಲಿಸಿದ ಅಂದರೆ ಅನುವಾದಿಸಿದ:

ದಾರಿ ಬಿಟ್ಟದ್ದಕ್ಕೆ ಹೋಂಡಾ ಕಾರು ತನ್ನ ಇಂಡಿಕೇಟರ್ ಮಿಟುಕಿಸಿ ಸ್ಕೋಡಾ ಕಾರಗೆ ಥ್ಯಾಂಕ್ಸ ಹೇಳಿತು, ಅದಕ್ಕೆ ಪ್ರತಿಯಾಗಿ ಸ್ಕೋಡಾ ಕೂಡಾ ಹೊಂಡಾಗೆ “ಯು ಅರ್ ವೆಲಕಂ” ಅಂತ ತನ್ನ “ಇಂಡಿಕೇಟರ್” ಮಿಟುಕಿಸಿತು.

ಅರೇ ವ್ಹಾ, ವ್ಹಾ, ಮನುಷ್ಯರೇ ಸಂಸ್ಕಾರ ಮರೆಯುತ್ತಿರುವಾಗ, ವಾಹನಗಳು ಸಂಸ್ಕಾರ ಮೆರೆಯುತ್ತಿರುವುದು ತಲೆಯ ಮೇಲಿನ ಟೋಪ್ಪಿಗೆ ತಾನೆತಾನಾಗಿ ಎಗರಿತು. ಅದೇ ಕ್ಷಣದಲ್ಲಿ ಪಕ್ಕದಲ್ಲಿ ಒಂದು ಕಾರು ಜೋರಾಗಿ ಕರ್ಕಷವಾಗಿ ಕೂಗಿ ಆಗ ತಾನೆ ಮೂಡಿದ್ದ ವಾಹನ ಪ್ರೀತಿಗೆ ತಣ್ಣೀರೆರಚಿ, ತನ್ನ ಕರ್ಣಕಠೋರ ಹಾರ್ನಿನಿಂದ ನನ್ನಲ್ಲಿ ಹುದುಗಿದ್ದ “ಶಬ್ದಮಾಲಿನ್ಯ ವಿರೋಧಿ”ಯನ್ನ ಬಡಿದೆಬ್ಬಿಸಿ ತಮ್ಮ ಬಗ್ಗೆ ನನ್ನ ದ್ವೇಷ ಮತ್ತೆ ದ್ವಿಗುಣಗೊಳಿಸಿದವು.ಆದರೆ ಮನಸ್ಸಿನ ಖಿನ್ನತೆ ದೂರವಾಗಿದ್ದು ಮಾತ್ರ ಹಿತವಾಗಿತ್ತು.

ಕಳೆದುಹೋದವನ ಮಳೆಯಲ್ಲಿ ನೆನೆದು…

ಆ ಮಳೆಯಲ್ಲವಳು..

ಗೆಳೆಯಾ,

ಮಳೆಗಾಲ ಮತ್ತೆ ಬಂದಿದೆ. ಹೌದೋ ನೀನು ತುಂಬಾ ನೆನಪಾಗ್ತಾಯಿದಿಯ. ನಿನ್ನನ್ನು ಮರೆಯಬೇಕೆಂದು ಎಷ್ಟೋ ಪ್ರಯತ್ನ ಪಟ್ಟೆ ಆದರೆ ಈ ಮಳೆಯ ಹಾಗೆ ಕ್ಷಣ ಕಾಲ ನಿಂತಂತಾಗಿ, ಮರುಕ್ಷಣ ಧೊ ಎಂದು ಸುರಿಯುತ್ತದೆ. ಹುಟ್ಟಿದಾಗಿನಿಂದ ಮಳೆಯೆಂದರೆ ಪಂಚಪ್ರಾಣ ಕಣೋ ನನಗೆ, ಮಳೆಯಲ್ಲಿ ನೆನೆಯೋದೇ ಬಲು ಖುಷಿ ನನಗೆ. ಆದರೇ ಈಗ ಮಳೆಯೆಂದರೆ ಬೇಜಾರಾಗ್ತಾಯಿದೆ, ಮಳೆ ಮೇಲೆ ಸಿಟ್ಟು ಬರ್ತಾಯಿದೆ. ಮಳೆ ಏಕಾದರೂ ಬರ್ತಾ ಇದೆಯೋ ಅನ್ನಿಸಿಬಿಟ್ಟಿದೆ. ಅದೆಲ್ಲಿತ್ತೋ ಸಿಟ್ಟು, ನಿನ್ನನ್ನು ಮರೆಯಲೇಬೇಕೆಂಬ ಹಟದಿಂದ ಕಿಟಕಿ, ಬಾಗಿಲುಗಳನ್ನು ಜೋರಾಗಿ ಮುಚ್ಚಿ, ಮುಸುಕು ಹಾಕಿಕೊಂಡು ಮಲಗಿದೆ. ನಿನ್ನ ನೆನಪೇ ಮುಸುಕೇಳೆದು ಬಿಟ್ಟಿತು. ಮನಸಾರೆ ಅತ್ತುಬಿಟ್ಟೆ, ನಿನ್ನನ್ನು ಮರೆತು ಬಿಡುವ ವ್ಯರ್ಥ ಪ್ರಯತ್ನದಲ್ಲಿ.

ಇತ್ತಿಚಿಗ್ಯಾಕೋ ತೀರಾ ಒಬ್ಬಂಟಿಯಾಗಿದ್ದೇನೆ ಅನ್ನಿಸಿಬಿಡುತ್ತೆ. ಯಾಕೆ ಕಾಲಿಟ್ಟೆ ನನ್ನ ಬದುಕಿನೊಳಗೆ? ಯಾಕಾದರು ಬಂದೆ? ಸುಮ್ಮನೇ ದಡದಲ್ಲಿ ಕುಳಿತವಳ ಕಾಲಿಗೆ ಅಲೆಯಾಗಿ ಬಡಿದು, ಇಡೀ ಸಮುದ್ರವನ್ನೇ ಪ್ರೀತಿಸುವಂತೆ ಕಾಡಿದೆ. ಹೇಗಿದ್ದೆ ನಾನು?, ಹೇಗೆಲ್ಲಾ ಬದಲಾಯಿಸಿದೆ. ನನ್ನಲ್ಲಿದ್ದ “ನನ್ನನ್ನೇ” ಬದಲಾಯಿಸಿಬಿಟ್ಟೆಯಲ್ಲಾ ಎಂಥವನು ನೀನು? ನನ್ನನ್ನಿಷ್ಟು ಬದಲಿಸಿದ ನೀನು, ನನ್ನನ್ನೊಬ್ಬಳನ್ನೇ ಬಿಟ್ಟು ಹೋದೆಯಲ್ಲ, ಮತ್ತೆ ಯಾರನ್ನು ಬದಲಿಸಲು ಅದೆಲ್ಲಿಗೆ ಹೊರಟು ಹೋದೆ?

ಆದರೇ ನಿನ್ನನ್ನು ದ್ವೇಷಿಸಲು ನನ್ನಿಂದಾಗುತ್ತಿಲ್ಲ. ನಿನ್ನ ಬಗ್ಗೆ ಎಳ್ಳಷ್ಟು ಸಿಟ್ಟಿಲ್ಲ, ನಿನ್ನ ಬಗ್ಗೆ ಯಾವ ತಕರಾರು ಇಲ್ಲ. ನಿನಗೆ ನನ್ನ ಮೇಲಿದ್ದ ಪ್ರೀತಿ ಸುಳ್ಳಲ್ಲ, ಅದು ಸುಳ್ಳೆoದು ಹೇಳಲು ನೀನು ಎಷ್ಟೇ ಪ್ರಯತ್ನಪಟ್ಟರು ನಾನು ನಂಬೊಲ್ಲ. ಒಂದೇ ಸಾರಿ ನನ್ನ ಕಣ್ಣ್ಮುಂದೆ ಬಂದು ಹೇಳು ನೋಡೋಣ ‘ನಿನ್ನ ಪ್ರೀತಿ ಸುಳ್ಳೆoದು” ನಿನ್ನ ಕಣ್ಣುಗಳ್ಯಾವತ್ತು ನನಗೆ ಸುಳ್ಳು ಹೇಳಿಲ್ಲ. ನಿನ್ನ ಮಾತುಗಳಲ್ಲಿದ್ದ ಪ್ರೀತಿಗಿಂತಲೂ ಹೆಚ್ಚಾಗಿ ನಿನ್ನ ‘ಕಣ್ಣು’ಗಳಲ್ಲಿದ್ದ ಪ್ರೀತಿಗೆ ಸೋತವಳು ನಾನು. ನಿನ್ನ ಪ್ರೀತಿಯ ಮೇಲೆ ನಂಬಿಕೆಯಿದೆ. ನಿನಗೆ ನನ್ನ ಮೇಲೆ ಎಷ್ಟೊಂದು ಪ್ರೀತಿಯಿತ್ತು, ಆ ಪ್ರೀತಿಯ ಕೈ ಹಿಡಿದೆ ಅಲ್ಲವಾ ನಾವು “ಕನಸು“ಗಳ ಲೋಕದಲ್ಲಿ ನಡೆದಿದ್ದು.

ಇಂಥ ಮಾತುಗಳಿಗೆ ಈಗ ಬೆಲೆಯಿಲ್ಲ, ಕಾಲ ಮಿಂಚಿ ಹೋಗಿದೆ. ‘ನಮ್ಮವರು’ ಬರುವ ಸಮಯವಾಯ್ತು, ಮಳೆಯಲ್ಲಿ ತೊಯ್ದುಕೊಂಡು ಬರ್ತಾರೆ. ನಿನಗಿಷ್ಟ ಅಂತ ಪಕ್ಕದಮನೆ ಅಂಟಿನ ಕಾಡಿ-ಬೇಡಿ ಕಲಿತ “ಪತ್ರೋಡೆ” ಮಾಡಬೇಕು, ಏಕೆಂದರೆ ಅದು ಇವರಿಗೂ ತುಂಬಾ ಇಷ್ಟ.

ಮುಂಬಯಿ, ಬರಿ ಮುಖವಾಡ ಮತ್ತು ಮಾನವಿಯತೆ ಇಲ್ಲಿ ಪವಾಡ…!!!

ಮುಂಬಯಿ ಕಥೆ-ಕಹಾನಿ

ಮುಂಬಯಿ ಭಾರತದ ಮಾಯಾನಗರಿ, ಕನಸುಗಳ ನಗರಿ, ಕನಸು ಮಾರುವ ನಗರಿ. ಮಂಬಯಿ ಉಗ್ರರಿಗೆ ಮೊದಲ ಗುರಿ, ಭೂಗತದೊರೆಗಳಿಗೆ ಜನ್ಮಭೂಮಿ, ಅಶ್ರಯನಗರಿ. ಎಂದೂ ನಿಲ್ಲದ ನಗರಿ, ಯಾರಿಗೂ ಕಾಯದ ನಗರಿ. “ಮುಂಬಯಿ ಬರಿ ಮುಖವಾಡ ಮತ್ತು ಮಾನವಿಯತೆ ಇಲ್ಲಿ ಪವಾಡ”

ಇದಿಷ್ಟು ನಾನು ಮುಂಬಯಿಗೆ ಅನ್ನ-ನೀರು ಅರಸಿ ಬರುವಾಗ ಗೆಳೆಯರು-ಹಿತೈಶಿಗಳು-ಹಿರಿಯರು ಹೇಳಿದ್ದು ಮತ್ತೂ ನಾನು ತಿಳಿದದ್ದು ಅಷ್ಟೆ. ಈ ತಿಂಗಳ ೩೦ಕ್ಕೆ ನನ್ನ ಮುಂಬಯಿ ಬದುಕಿಗೆ ೩ ವರ್ಷ ಕಳೆದು, ನಾಲ್ಕನೇ ವರ್ಷಕ್ಕೆ ಕಾಲಿಡುತ್ತದೆ. ಬರುವಾಗಿದ್ದ ಆತಂಕ-ಭಯಗಳ ಜಾಗದಲ್ಲಿ ಮುಂಬಯಿಯ ಬಗ್ಗೆ ಹೆಮ್ಮೆ-ಗೌರವಗಳಿವೆ.

ಕವಿ ಕಾಯ್ಕಿಣಿ ಹೇಳಿದಂತೆ “ಕಾಯಕದ ಕೈಲಾಸ” ಮುಂಬಯಿ, ಈಗ ನನ್ನ ಕಾಯಕದ ಕೈಲಾಸವೂ ಹೌದು. ಮುಂಬಯಿಗೆ ಕಾಲಿಟ್ಟ ಈ ಮೂರು ವರ್ಷಗಳಲ್ಲಿ ಮುಂಬಯಿಯ ಅತ್ಯಂತ ಕರಾಳ ಮಳೆಯನ್ನು, ಲೋಕಲಗಳಲ್ಲಾದ ಬಾಂಬ ಸರಣಿ ದುರಂತವನ್ನು ನೋಡಿದ್ದೆನೆ, ಹಾಗೆಯೇ ಮುಂಬೈಕರಗಳ ಮಾನವಿಯ ಮುಖವನ್ನು ಕೂಡ. ಅಂತೆಯೇ ಮುಂಬಯಿಯನ್ನು ಕಾಡುತ್ತಿರುವ ಭೂಗತಲೋಕ, ಮರಾಠಿ ಮಾನುಸ ವಿಚಾರ, ಹಿಂದಿ ಚಿತ್ರೊದ್ಯಮ ಮತ್ತು ಅವರೊಳಗಿನ ಗಾಸಿಪ್ಪುಗಳು, ಹಾಜಿ ಅಲಿ-ಸಿದ್ಧಿವಿನಾಯಕರ ಸುದ್ದಿಗಳು, ಮುಂಬಯಿನ ಲೋಕಲ್ಲು ಮತ್ತು ಅದರ ಹಳಿಗಳೊಂದಿಗೆ ಸಾಗುವ ಬದುಕು, ಕನಸು ಅರಸಿ ಬಂದವರು ಮತ್ತು ಕನಸು ಕಳೆದುಕೊಂಡವರು, ವನ-ರೂಮ ಕಿಚನ್ನಲ್ಲಿ ಬದುಕುವ ಬವಣೆ, ಮನೆಯೊಳಗೆ ಹೇಲಿಕ್ಯಾಪ್ಟರನ್ನು ಇಳಿಸುವ ಅಂಬಾನಿ, ಇವರೊಂದಿಗೆನೆ ಬದುಕುವ ಎಶಿಯಾದ ದೊಡ್ಡ ಸ್ಲಮ್ “ಧಾರಾವಿ” ಮತ್ತದರ ತಮ್ಮಂದಿರು, ಕೊಟ್ಯಾಧಿಪತಿ ಭಿಕ್ಷುಕರು ಮತ್ತು ಅವರನ್ನು ತಯಾರಿಸುವ ಕಾರಖಾನೆಗಳು, ಮುಂಬಯಿಯ ಮಳೆ ಮತ್ತು ಅದು ಹುಟ್ಟಿಸುವ ಮಾನವಿಯತೆ, ಒಟ್ಟಿನಲ್ಲಿ ಮುಂಬಯಿ ಮತ್ತು ಮುಂಬೈಕರಗಳ ಇನ್ನು ಅನೇಕ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಾಗಿದೆ. ಹೀಗಾಗಿ ನನ್ನದೊಂದು ಸಣ್ಣ ಪ್ರಯತ್ನ “ಮುಂಬಯಿ: ಕಥೆ-ಕಹಾನಿ”, ಇದನ್ನು ಅಂಕಣವೆನಬೇಕೊ, ನನ್ನ ಅನುಭವವೇನಬೇಕೊ, ಇಲ್ಲ ಮುಂಬಯಿ ಬಗ್ಗೆ ಒಂದು ನ್ಯೂಜ್ ಎನ್ನಬೇಕೂ ಅದನ್ನು ನೀವೆ ನಿರ್ಧರಿಸಿ.

ನನಗಿದು ನನ್ನ “ಕಾಯಕದ ಕೈಲಾಸ”ವನ್ನು ಇನ್ನಷ್ಟು ಅರಿತುಕೊಳ್ಳುವ ಒಂದು ಸಣ್ಣ ಪ್ರಯತ್ನ. ನಿಮ್ಮ ಬೆಂಬಲವಿರಲಿ.

ಒಮ್ಮೆ ನೀನು…

ಒಮ್ಮೆ ನೀನು ನಕ್ಕುಬಿಡು
ನನ್ನ ನೋಡಿ ಸುಮ್ಮನೇ…
ಕಳೆದು ಹೋಗಲೊಂದು ಬದುಕು
ಅದರ ಒಂದು ನೆನಪಲೇ…

ಹೆಣ್ಣಿಗೊಂದು ಕಿವಿಮಾತು ? ಇನ್ನೊಂದಿಷ್ಟೆ ಇಷ್ಟು…

ಓ ಹೆಣ್ಣೆ…ಕೈ ಕೊಡುವ ಬದಲು
ನಿನ್ನ ತಂಗಿ/ಗೆಳತಿಯ ಕೊಟ್ಟು ನೋಡು
ಮತ್ತೆ ನೂರಾರು “ಕಾಳಿದಾಸ”ರು
ಹುಟ್ಟಿಯಾರು, ಇಲ್ಲದೆ ಹೋದರೇ
ಕ್ಷೌರದಂಗಡಿಯವರು ಬಾಗಿಲು ಮುಚ್ಚಿಯಾರು,
ಮದ್ಯದಂಗಡಿಯವರು ‘ಮಧ್ಯಾ’ನ ತೆರೆದಾರು…!!!!

ಚಂದನರ ಬ್ಲಾಗಿನಲ್ಲಿ “ಹೆಣ್ಣಿಗೊಂದು ಕಿವಿಮಾತು ?” ಕವನ ಓದಿದಾಗ ಹುಟ್ಟಿದ್ದು, Just ಸುಮ್ನೆ ತಮಾಶೆಗೆ ಈ ಕವನ, ಯಾರಾದ್ರೂ ಹೀಗೆ ಮಾಡಿರಾ..ಮತ್ತೇ   ;)

ಬಡ್ಡಿಮಗಂದು…ಕನಸು ಬೈದು ಹೇಳಿತು

ನನ್ನೆದೆಯ ಗೂಡಿನಲ್ಲಿ, ಅವಳ
ನೆನಪುಗಳ ಗೋರಿ ಕಟ್ಟಿದೆ,
ಹೇಗೊ-ಎನೋ, ಗೋರಿಯ ಮಣ್ಣ
ಮೇಲೆ ಗರಿಕೆ-ಹುಲ್ಲು ಹುಟ್ಟಿದೆ.

ಕನಸುಗಳೆಂಬ ಬೇರಿಗೆ
ಕಟ್ಟುಬಿದ್ದು ಅಲ್ಲೆ ನಿಂತಿದ್ದೆ.
ನಿನ್ನೆ ಹೂವಾಗಿ, ಹಣ್ಣಾಗಿ,
ಒಣಗಿ ಬೀಜ ದೂರ ಹಾರಿದೆ.

ಮನಸ್ಸು… ಬುದ್ದಿ ಹೇಳಿತು
ಅವಳು ನಿನ್ನ ಬದುಕು, ಒಪ್ಪಿಕೋ.
ಬಡ್ಡಿಮಗಂದು…ಕನಸು ಬೈದು ಹೇಳಿತು
ಅವಳೇ ನಿನ್ನ ಬದುಕು, ತಪ್ಪಿಸಿಕೋ…!!!

ಮುಂಬಯಿ ಮತ್ತೇ (ಮಳೆ)ಪ್ರಳಯ..!!!

ಒಂದು ಮಳೆಯಾದ ಮುಂಜಾನೆ..

ಒಂದು ಮಳೆಯಾದ ಮುಂಜಾನೆ..

ರಾತ್ರಿ ಮಳೆಯಾದರೆ, ಮರುದಿನದ ಮುಂಜಾನೆಯ ತಿಳಿ ಬಿಸಿಲಿಗೆ ಎಂತದೋ ಸಡಗರ, ಎಂತದೋ ಘನತೆ, ಅದರೊಂದಿಗೆ ಬರುವ ಗಾಳಿಯಲ್ಲಿ ಎಂತದೋ ಘಮ.

ಮೋಡ ಮುಸುಕಿದ ಮೂರು ದಿನಗಳ ನಂತರ ಈ ಭೂಮಿ ತಿಳಿ ಬಿಸಿಲು ಕಂಡಿದೆ, ಅದಕ್ಕೋ ಎಂತದೋ ಸಂಭ್ರಮ, ಇಡೀ ವಾತಾವರಣವೇ ಅಹ್ಲಾದಕರ, ಅದರೊಂದಿಗೆ ನಿನ್ನ ಸವಿ ಸವಿ ನೆನಪು. ನೆನಪಿಗೆ ಬಂದವಳನ್ನು ಹಾಗೆ ಹಿಡಿದಿತ್ತುಕೊಳ್ಳಲು ಆಸೆ ಪಡುತ್ತದೆ ಮನಸ್ಸು, ಆಗಿದ್ದವಳು ಈಗಿಲ್ಲ, ಮೋಡವೋಂದು ಅಡ್ಡವಾಯಿತು. ನೀನೆಲ್ಲೋ ಆ ಮೇಘರಾಣಿಯ ಚೊಚ್ಚಳ ಮಗಳಿರಬೇಕು, ನನ್ನ ನೆನಪಿಗೆ ಬಂದವಳೆಲ್ಲಿ ಈ ತೀಲಿಬಿಸಿಲಿಗೆ ಕಪ್ಪಗಾಗಿಯಾ ಎಂದು ತನ್ನ ಸೆರಗು ಅಡ್ಡ ಹಿಡಿದಿದ್ದಾಳೆ.

ಈ ಮುಂಜಾನೆಯ ತಿಳಿ ಬಿಸಿಲ ಗಮ್ಮತ್ತೆ ಬೇರೆ, ನಮ್ಮ ಸುತ್ತಲಿನ ಜಗತ್ತು ಬೇರೆಯೇ ಆಗಿ ಕಾಣುತ್ತದೆ, ಅದೆಲ್ಲವೂ ಚಿನ್ನದ್ದೇನೋ ಅನ್ನಿಸಿಬಿಡುತ್ತದೆ. ಈ ತಿಳಿ ಬಿಸಿಲ ಚಿನ್ನದ ಬಣ್ಣದಲ್ಲಿ ಚೆಂಬೂರಿನ ಕೊಳಗೆರಿ ಕೊಡ ಆ ಸುವರ್ಣ ಲಂಕೆಯಾಗಿ ತೋರುತ್ತದೆ. ಅಲ್ಲಿನ ಕಪ್ಪು ಮಣ್ಣಿನ ಮಕ್ಕಳೂ ಚಿನ್ನದ ಪುತ್ಥಳಿಗಳಾಗಿದ್ದಾರೆ. ಈ ತಿಳಿ ಬಿಸಿಲ ಸೂರ್ಯನು ಕೂಡಾ ತುಂಬಾ ಒಳ್ಳೆಯವನು, ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಕೊಡಾ ಮುಗುಳ್ನಕ್ಕೂ “ಹಲೋ” ಎನ್ನುತ್ತಾನೆ, ಕಣ್ಣು ಕೋರೈಸದೇ. ಮುಂಜಾನೆಯ ಗಾಳಿಯೂ ಕೂಡಾ ಅಷ್ಟೇ ತಂಪಾಗಿ ಸುಳಿದು, ನಿನ್ನೆಯಷ್ಟೇ ಬಿದ್ದ ಮಳೆಯ ಘಮವೆಲ್ಲ ಹಂಚುತ್ತದೆ. ನನಗೆ ನಿನ್ನ ನೆನಪನ್ನು ಹೊತ್ತು ತಂದು ಮೈಯೆಲ್ಲ ಕಚಗುಳಿಯಿಡುತ್ತದೆ ಹಳೆಯ ಗೆಳೆಯನಂತೆ.

ನಿನ್ನೆ ಆದ ಮಳೆಗೆ ಇಡಿ ಭೂಮಿಯೇ ತೋಳೆದಿಟ್ಟಂತಿದೆ, ಗಿಡ ಮರಗಳೆಲ್ಲ ಫಳ-ಫಳ ಹೋಳೆಯುತ್ತಿದ್ದಾವೆ. ಹಸಿರೆಲೆಗಳೇಲ್ಲ ಹೋಸದಾಗಿವೆ. ರಸ್ತೆಗಳೆಲ್ಲ ಕ್ಲೀನಾಗಿವೆ.ದಿನಾ ಕಾಣುವ ಅವೇ ರಸ್ತೆ-ಕಟ್ಟಡಗಳು ಇವತ್ತಷ್ಟೆ ಕಟ್ಟಿದ್ದಾರೆನೋ ಎಂಬಂತೆ ಕಾಣುತ್ತಿವೆ. ಯಾವುದೊ ಗಂಧವ೯ ಲೋಕವೇನೊ ಅನ್ನಿಸಿಬಿಡುತ್ತದೆ.

ದಿನಾ ಕಾಣೋ ಹುಡುಗಿಯರೆಲ್ಲ ಇವತ್ತೇ ಇಷ್ಟೊಂದು ಸುಂದರವಾಗಿ ಕಾಣುತ್ತಿದ್ದಾರೆ. ದಿನ ಇದೆ ಬಸ್ಸನ್ನೆ ಹತ್ತುವ ಆ ಕಪ್ಪು ಸುಂದರಿ “ರಂಭೆ”ಯ ಕೋನೆಯ ತಂಗಿಯೇನೊ ಅನಿಸುತ್ತಿದ್ದಾಳೆ, ಅಗೋ ಆ ಸಿಡಬು ಕಲೆಯ ಸಿಡುಕ ಮುಖದವನಿಗೂ ಇಂದು ವಿನಾಕಾರಣ ಮುಗುಳ್ನಗೆ.

“ಮುಂಗಾರುಮಳೆಯೇ ಏನು ನಿನ್ನ ಹನಿಗಳ ಲೀಲೇ..”

ಎಂದೊ ಕಂಡ ಕನಸು…

ನಿನ್ನ ವಿದಾಯಕ್ಕೊಂದು ವಂದನಾರ್ಪಣೆ..

ನನ್ನ ಬಾಳ ಕಥೆಯ ಹರೆದು ಹೋದ ಪುಟವೇ,

ಬೇಸರವಾಯಿತಾ? ನಿನಗೆ “ಹರೆದ ಪುಟ”ವೆಂದುದಕ್ಕೆ? ಆಗಿದ್ದರೆ No ರಿಗ್ರೇಟ್.

ನೀನು ನನ್ನ ಬದುಕಿಗೆ ಕಾಲಿಡುವ ಮೊದಲು ನಾನು ಎಷ್ಟೊಂದು ಚೆನ್ನಾಗಿದ್ದೆ ಗೊತ್ತಾ? ಎಷ್ಟೊಂದು ಸಂತೋಷವಾಗಿದ್ದೆ, ಏನೇನು ಕೊರತೆಗಳೇ ಇರಲಿಲ್ಲ. ಪ್ರೀತಿಸುವ ಅಪ್ಪ-ಅಮ್ಮ, ಮುದ್ಡಿಸುವ ಅಕ್ಕ-ಅಣ್ಣರ ಜೊತೆ ಎಷ್ಟೊಂದು ಹಾಯಾಗಿದ್ದೆ ಯಾವುದೇ ಕೊರತೆಗಳೇ ಇಲ್ಲದೇ. ನೀನು ನನ್ನ ಬದುಕಿಗೆ ಕಾಲಿಟ್ಟೆ ನೋಡು ನಾನು ಬದಲಾಗಿಬಿಟ್ಟೆ. ಕೊರತೆಗಳೇ ಇಲ್ಲದ ಬದುಕು ಬದುಕಲ್ಲವೇನೋ ಎಂದು ಕಲ್ಪಿಸಿಕೊಂಡು, “ನನ್ನ ಬದುಕಲ್ಲಿ ಕೊರತೆಗಳೇ ಇರದಿರುವುದೇ ಬಹುದೊಡ್ಡ ಕೊರತೆ” ಎಂದುಕೊಂಡುಬಿಟ್ಟೆ.

ಮೊದಮೊದಲು ನಿನ್ನ ಕನಸುಗಳ ಬಗ್ಗೆ ನಿನ್ನ ಮಾತುಗಳು, ನೀನು ತೋರಿಸುತ್ತಿದ್ದ ಡೇರ್-ಡ್ಯಾಷ ಸ್ವಭಾವ ಕಂಡಾಗ ನೀನೊಬ್ಬ ಸಕತ್ ವುಮನೈಸರ್, ಪಕ್ಕಾ ಫ್ಲರ್ಟ್ ಅಂದುಕೊಂಡಿದ್ದೆ. ಆದರೆ ನಿನ್ನ ಹಿಂದೆ ಯಾವತ್ತು ಯಾವುದೇ ಹುಡುಗಿಯನ್ನು ನೋಡಲೇ ಇಲ್ಲ. ಅವತ್ತೇ ನನಗನಿಸಿದ್ದು ನೀನೊಬ್ಬ ಕನಸು ಕಾಣಲಾಗದ ಕನಸುಗಾರ, ಕನಸು ಕಾಣಲು ಹೆದರುವ ಪುಕ್ಕಲ ಹೀಗಾಗಿ ಆ ಕನಸು ಕಾಣದ ಭಯ ಮುಚ್ಚಿಟ್ಟುಕೊಳ್ಳಲು ನೀನು ಬರಿ ಕನಸುಗಳ ಬಗ್ಗೆ ಮಾತನಾಡುತ್ತಾ “ಪ್ರತಿ ಕ್ಷಣ ಅನುಭವಿಸು” ಎಂದು ಹೇಳುತ್ತಾ ಇಬ್ಬಂದಿತನ ತೋರಿಸುತ್ತಿ. ನಿನ್ನೊಳಗೆ ಧೈರ್ಯವೇ ಇಲ್ಲ ಎಂಬುದನ್ನು ಮುಚ್ಚಿಕೊಳ್ಳಲು ಈ ಡೇರ್-ಡ್ಯಾಷ ಮುಖವಾಡ.

‘ಎ ಕೇಳೋ, ಇವತ್ತು ಗಟ್ಟಿಯಾಗಿ ಕೂಗಿ ಹೇಳ್ತಾಯಿದೀನಿ ಕೇಳು, ನೀನೊಬ್ಬ ಹೇಡಿ, ಶುದ್ಧಾನು ಶುದ್ದ ಹೇಡಿ.”

ಇದೇನು ನನಗೆ ಇವತ್ತು ಗೊತ್ತಾಯ್ತು ಅಂದುಕೊಂಡೇಯಾ? ಇದು ನನಗೆ ಯಾವತ್ತೋ ಗೊತ್ತಾಗಿತ್ತು, ಪ್ರೀತಿಗಾಗಿ ಕೈ ಚಾಚಿದ ನಿನ್ನ ಕೈಯನ್ನು ಹಿಡಿಯುವ ಮೊದಲೇ ನನಗೆ ಗೊತ್ತಿತ್ತು, “ನೀನೊಬ್ಬ ಕನಸು ಕಾಣಲು ಹೆದರುವ ಹೇಡಿ” ಎಂದು.

ಆದರೂ ನೀನು ಚಾಚಿದ ಕೈಯೇಕೇ ಹಿಡಿದೆ ಗೊತ್ತಾ? ನನ್ನೊಳಗಿದ್ದ ಅಸಂಖ್ಯಾತ ಕನಸುಗಳು. ಇವೇ ಕನಸುಗಳೇ ಕಣೊ ನಿನ್ನ ಪ್ರೀತಿ ಒಪ್ಪಿಕೊಳ್ಳುವಂತೆ ಮಾಡಿದ್ದು ಮತ್ತು ನನ್ನಳೋಗಿದ್ದ ಭ್ರಾಂತಿ…, “ನೀನಗೂ ಕೂಡಾ ಕನಸು ಕಾಣುವುದನ್ನು ಕಲಿಸಬಲ್ಲೆ” ಎಂಬ ಭ್ರಾಂತಿ. ಹೊಸ ಕನಸುಗಳನ್ನು ಕನಸದಿದ್ದರೂ ನನ್ನ ಕನಸುಗಳನ್ನೇ ನಿನ್ನೊಂದಿಗೆ ಹಂಚಿಕೊಳ್ಳುತ್ತೇನೆಂಬ ಭ್ರಮೆ. ನಿನ್ನ ಬಗ್ಗೆ ನಾನಿಟ್ಟುಕೊಂಡ ಭ್ರಮೆ, “ನನ್ನ ಹುಡುಗ ಕನಸು ಕಾಣದಿದ್ದರೂ, ನಾ ಕಂಡ ಕನಸುಗಳನ್ನು ಹಂಚಿಕೊಂಡು ಬದುಕುತ್ತೇವೆ ಮತ್ತು ಏನನ್ನಾದರೂ ಸಾಧಿಸುತ್ತೇವೆ” ಎಂಬ ಭ್ರಮೆ. ಆದರೆ ನಿನ್ನನ್ನು ಪ್ರೀತಿಸಿದ ಮೇಲೇನೇ ನನಗೆ ಗೊತ್ತಾಗಿದ್ದು, ‘ನೀನು ಕನಸು ಕಾಣೋದಕ್ಕೆ ಮಾತ್ರವಲ್ಲ ಹಂಚಿಕೊಳ್ಳುವುದಕ್ಕೂ ಹೆದರುವವನು ನೀನೊಬ್ಬ ಶುದ್ದ ಹೇಡಿ ಅಂತ’.

ನೀನು ಸಿಗದೆ ಇದ್ದುದಕ್ಕೆ ನನಗೇನೂ ದುಖವಿಲ್ಲ. ಒಂದು ರೀತಿ ಸಂತೋಷವಾಗ್ತಾಯಿದೆ ಏಕೆಂದರೆ ನಿನ್ನಂತ ಹೇಡಿಯ ಜೊತೆ ಬದುಕೆಲ್ಲ ಹೆಣಗಾಡುವಂತಾಗಲಿಲ್ಲವಲ್ಲ. Thank God…

ಇಂತಿ

ಕಳೆದುಹೋದವನ ಮರೆತವಳು

Next Page »


Blog Stats

  • 2,606 hits

ಕೆಂಡಸಂಪಿಗೆಯಲ್ಲಿ "ಮೆಚ್ಚುಗೆ"ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.